ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ ಖಾಸಗಿ ಸ್ಲೀಪರ್ ಬಸ್‌; 8 ಪ್ರಯಾಣಿಕರಿಗೆ ಗಾಯ.

ಹೊತ್ತಿ ಉರಿದ ಖಾಸಗಿ ಸ್ಲೀಪರ್ ಬಸ್‌

ಜನಸ್ಪಂದನ ನ್ಯೂಸ್, ಚಿತ್ರದುರ್ಗ: ಚಿತ್ರದುರ್ಗದಲ್ಲಿ ಬಸ್ ಅಪಘಾತದ ಘಟನೆ ಮಾಸುವ ಮುನ್ನವೇ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಭಯಾನಕ ಅವಘಡ ನಡೆದಿದೆ. ಹೊಸನಗರ ತಾಲೂಕಿನ ಸೂಡೂರು ಸಮೀಪ ಚಲಿಸುತ್ತಿದ್ದ ಖಾಸಗಿ ಎಸಿ ಸ್ಲೀಪರ್ ಬಸ್ಸಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾದ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.

ಹೊಸನಗರದಿಂದ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ‘ಶ್ರೀ ಅನ್ನಪೂರ್ಣೇಶ್ವರಿ’ ಸಂಸ್ಥೆಗೆ ಸೇರಿದ ಬಸ್ಸಿನಲ್ಲಿ ಸುಮಾರು 36 ರಿಂದ 40 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅರಸಾಳು ಮತ್ತು ಸೂಡೂರು ಗ್ರಾಮಗಳ ಮಧ್ಯೆ ಇರುವ 9ನೇ ಮೈಲಿಗಲ್ಲು ಸಮೀಪ ಬಸ್ ಚಲಿಸುತ್ತಿದ್ದ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ಹೊತ್ತಿ ಉರಿದ ಖಾಸಗಿ ಸ್ಲೀಪರ್ ಬಸ್‌ :

ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ :

ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಎಚ್ಚೆತ್ತ ಚಾಲಕ ಅಪಾರ ಧೈರ್ಯ ಪ್ರದರ್ಶಿಸಿ, ವಾಹನವನ್ನು ನಿಯಂತ್ರಿಸಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಎಮರ್ಜೆನ್ಸಿ ಡೋರ್ ಮೂಲಕ ಸುರಕ್ಷಿತವಾಗಿ ಹೊರಬರುವ ಅವಕಾಶ ದೊರೆತಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ದೊಡ್ಡ ಪ್ರಮಾಣದ ಪ್ರಾಣಾಪಾಯ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.‌

ಈ ಅಪಘಾತ ಸುದ್ದಿ ಓದಿ : ದಾರುಣ ಬಸ್ Accident : 15 ಮಂದಿ ಸಾವು, ಹಲವು ಮಂದಿ ಗಂಭೀರ.

8 ಮಂದಿಗೆ ಗಾಯ, ಮೆಗ್ಗಾನ್ ಆಸ್ಪತ್ರೆಗೆ ದಾಖಲು :

ಈ ಅವಘಡದಲ್ಲಿ ಬಸ್ಸಿನಲ್ಲಿದ್ದ 40 ಪ್ರಯಾಣಿಕರ ಪೈಕಿ 8 ಮಂದಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಪ್ರಯಾಣಿಕರಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಸಂಪೂರ್ಣ ಸುಟ್ಟು ಕರಕಲಾದ ಬಸ್ :

ಬೆಂಕಿ ಕ್ಷಣಾರ್ಧದಲ್ಲಿ ಇಡೀ ಬಸ್ಸಿಗೆ ವ್ಯಾಪಿಸಿದ ಪರಿಣಾಮ ಪ್ರಯಾಣಿಕರ ಬಟ್ಟೆ, ಚೀಲಗಳು ಹಾಗೂ ಮೌಲ್ಯಯುತ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ರಸ್ತೆ ಮೂಲಕ ಸಾಗುತ್ತಿದ್ದ ಸಾರ್ವಜನಿಕರು ಧಾವಿಸಿ ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದಾರೆ.

shivamogga sleeper bus fire accident 1
ಸಂಪೂರ್ಣ ಸುಟ್ಟು ಕರಕಲಾದ ಬಸ್

ಅಗ್ನಿಶಾಮಕ ದಳದ ಕಾರ್ಯಾಚರಣೆ :

ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಬಸ್ ಸಂಪೂರ್ಣವಾಗಿ ಹಾನಿಗೊಂಡಿದ್ದು, ನಷ್ಟದ ಪ್ರಮಾಣ ಹೆಚ್ಚಾಗಿದೆ.

ಇದನ್ನು ಓದಿ : ಭೀಕರ ಅಪಘಾತ: ಖಾಸಗಿ ಬಸ್–ಲಾರಿ ಡಿಕ್ಕಿ, 9 ಜನ ಸಜೀವ ದಹನ.

ತನಿಖೆ ಆರಂಭ :

ಈ ಕುರಿತು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ಸಿಗೆ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Courtesy : Social Media (Kannada Prabha)


Disclaimer :ಈ ವರದಿ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದ್ದು, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಅಪಕೀರ್ತಿಗೊಳಿಸುವ ಉದ್ದೇಶ ಇಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಅಧಿಕಾರಿಗಳ ಅಧಿಕೃತ ಪ್ರಕಟಣೆಯನ್ನು ನಿರೀಕ್ಷಿಸಲಾಗುತ್ತಿದೆ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top