ಜನಸ್ಪಂದನ ನ್ಯೂಸ್, ದೊಡ್ಡಬಳ್ಳಾಪುರ: ಪ್ರೀತಿ ಹಾಗೂ ಮದುವೆಯ ಹೆಸರಿನಲ್ಲಿ ಪುರುಷರನ್ನು ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ದೊಡ್ಡಬಳ್ಳಾಪುರ ತಾಲೂಕಿನ ಮಹಿಳೆಯೊಬ್ಬಳ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸುಧಾರಾಣಿ ಎಂಬ ಮಹಿಳೆ ವಿರುದ್ಧ ಇಬ್ಬರು ಗಂಡಂದಿರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪ್ರೀತಿ-ಪ್ರೇಮ ; ಮೂರು ಮದುವೆ – ಒಂದೇ ಉದ್ದೇಶ?
ಮದುವೆಯ ಮೂಲಕ ಹಣ ದೋಚುವ ಉದ್ದೇಶದಿಂದಲೇ ಸುಧಾರಾಣಿ ಮೂರು ಮದುವೆ ಮಾಡಿಕೊಂಡಿದ್ದಾಳೆ ಎಂಬ ಆರೋಪಗಳು ಕೇಳಿಬಂದಿವೆ. ಪ್ರೀತಿ, ಪ್ರೇಮ ಎಂಬ ಹೆಸರಿನಲ್ಲಿ ಗಂಡಸರನ್ನು ನಂಬಿಸಿ ಬಳಿಕ ಹಣ ಪಡೆದು ದೂರವಾಗುತ್ತಿದ್ದಾಳೆ ಎಂದು ಆರೋಪಿಸಲಾಗಿದೆ.
ಮೊದಲ ಗಂಡನಿಂದ ದೂರವಾದ ಸುಧಾರಾಣಿ :
ಸುಧಾರಾಣಿ ಮೊದಲಿಗೆ ವೀರೇಗೌಡ ಎಂಬವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳೂ ಇದ್ದರು. ಆದರೆ ಕೆಲ ವರ್ಷಗಳ ಬಳಿಕ “ನೀನು ಜೀವನ ನಡೆಸಲು ತಕ್ಕವನಲ್ಲ” ಎಂದು ಹೇಳಿ ಗಂಡ ಮತ್ತು ಮಕ್ಕಳನ್ನು ಬಿಟ್ಟು ಹೋಗಿದ್ದಾಳೆ ಎಂಬ ಆರೋಪವಿದೆ.
ಈ ಸುದ್ದಿನೂ ಓದಿ : ಅಂತರ್ಜಾತಿ ಪ್ರೀತಿಗಾಗಿ 19 ವರ್ಷದ ತಂಗಿಯ ಕೊಲೆ ; ಸಹೋದರ, ಸ್ನೇಹಿತನ ಬಂಧನ.
ಡೆಲಿವರಿ ಬಾಯ್ ಜೊತೆ ಎರಡನೇ ಮದುವೆ :
ಮೊದಲ ಗಂಡನಿಂದ ದೂರವಾದ ನಂತರ ಸುಧಾರಾಣಿ, ಅನಂತಮೂರ್ತಿ ಎಂಬ ಡೆಲಿವರಿ ಬಾಯ್ ಪರಿಚಯ ಮಾಡಿಕೊಂಡು, ತನ್ನ ಮೊದಲ ಗಂಡ ಮೃತಪಟ್ಟಿದ್ದಾನೆ ಎಂದು ಸುಳ್ಳು ಹೇಳಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ ಎಂದು ಹೇಳಲಾಗಿದೆ.
ಮದುವೆಯ ನಂತರ ‘ಮಾವನ ಚಿಕಿತ್ಸೆ’, ‘ಕುಟುಂಬದ ಸಮಸ್ಯೆ’ ಎಂಬ ಕಾರಣ ಹೇಳಿ ಸುಮಾರು 20 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಅನಂತಮೂರ್ತಿಯಿಂದ ಪಡೆದು ಬಳಿಕ ಸಂಪರ್ಕ ಕಡಿತ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಮೂರನೇ ಮದುವೆಯ ಆರೋಪ :
ಇದೇ ವೇಳೆ, ಸುಧಾರಾಣಿ ಈಗಾಗಲೇ ಕನಕಪುರ ಮೂಲದ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ ಎಂಬ ಆರೋಪವೂ ಕೇಳಿಬಂದಿದೆ. ಹಣವಿರುವವರನ್ನು ಗುರಿಯಾಗಿಸಿಕೊಂಡು ಮದುವೆ ಎಂಬ ನೆಪದಲ್ಲಿ ವಂಚನೆ ಮಾಡುತ್ತಿದ್ದಾಳೆ ಎಂದು ಮೊದಲ ಗಂಡ ಆರೋಪಿಸಿದ್ದಾರೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ಗಂಡಂದಿರು :
ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಇಬ್ಬರು ಗಂಡಂದಿರು ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣದ ಕುರಿತು ತನಿಖೆ ಆರಂಭವಾಗಿದೆ. ಮಹಿಳೆಯ ವಿರುದ್ಧ ವಂಚನೆ, ಮೋಸ ಹಾಗೂ ನಂಬಿಕೆ ದ್ರೋಹದ ಆರೋಪಗಳು ದಾಖಲಾಗಿವೆ.
ಇದನ್ನು ಓದಿ : ಪ್ರೀತಿ ವಿಚಾರಕ್ಕೆ Instagram ಸ್ನೇಹಿತನಿಂದ 21 ವರ್ಷದ ಯುವತಿ ಮೇಲೆ ಹಲ್ಲೆ.
ಪೊಲೀಸರು ಏನು ಕ್ರಮ ಕೈಗೊಳ್ಳುತ್ತಾರೆ?
ಮದುವೆ ಹೆಸರಲ್ಲಿ ನಡೆದಿರುವ ಈ ವಂಚನೆ ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಸುಧಾರಾಣಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈ ಘಟನೆ ಇದೀಗ ಸ್ಥಳೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
Courtesy : News 18 Kannada
Disclaimer : ಈ ಸುದ್ದಿಯಲ್ಲಿ ಉಲ್ಲೇಖಿಸಿರುವ ಮಾಹಿತಿಗಳು ದೂರುದಾರರು ಹಾಗೂ ಪೊಲೀಸ್ ಮೂಲಗಳಿಂದ ಲಭ್ಯವಾದ ಮಾಹಿತಿಯ ಆಧಾರದಲ್ಲಿವೆ. ತನಿಖೆ ಪ್ರಗತಿಯಲ್ಲಿದ್ದು, ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗುವವರೆಗೂ ಆರೋಪಿತ ವ್ಯಕ್ತಿಯನ್ನು ದೋಷಿ ಎಂದು ಪರಿಗಣಿಸಲಾಗುವುದಿಲ್ಲ. ಈ ವರದಿ ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಕಟಿಸಲಾಗಿದೆ.





