ಶನಿವಾರ, ಫೆಬ್ರವರಿ 14, 2026

Janaspandhan News

HomeCrime Newsಪ್ರೇಮಿಗಳ ದಿನದ ಮುನ್ನ ಭೀಕರ ಘಟನೆ: ತ್ರಿಕೋನ ಪ್ರೇಮಕಥೆಗೆ ಯುವತಿಯ ಬಲಿ,!
spot_img

ಪ್ರೇಮಿಗಳ ದಿನದ ಮುನ್ನ ಭೀಕರ ಘಟನೆ: ತ್ರಿಕೋನ ಪ್ರೇಮಕಥೆಗೆ ಯುವತಿಯ ಬಲಿ,!

ಜನಸ್ಪಂದನ ನ್ಯೂಸ್‌, ಮುಂಬೈ : ನಾಳೆ (ಫೆಬ್ರವರಿ 14) ಪ್ರೇಮಿಗಳ ದಿನವನ್ನು ವಿಶ್ವದಾದ್ಯಂತ ಪ್ರೇಮಿಗಳು ಸಂಭ್ರಮದಿಂದ ಆಚರಿಸಲು ಸಜ್ಜಾಗಿರುವ ನಡುವೆಯೇ, ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದ ಭಯಾನಕ ಘಟನೆಯೊಂದು ಜನರಲ್ಲಿ ಆತಂಕ ಮೂಡಿಸಿದೆ. ತ್ರಿಕೋನ ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ಯುವತಿಯೊಬ್ಬಳನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕೊಲೆಯಾದ ಯುವತಿಯನ್ನು ಶಿಫಾ (19) ಎಂದು ಗುರುತಿಸಲಾಗಿದೆ. ಈ ಘಟನೆ ಮುಂಬೈನ ಶಿವಾಜಿ ನಗರ ಪ್ರದೇಶದಲ್ಲಿನ ಮಸೀದಿ ಸಮೀಪ ಗುರುವಾರ ಮಧ್ಯಾಹ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಶಿಫಾ ಹಾಗೂ 25 ವರ್ಷದ ಮತ್ತೊಬ್ಬ ಮಹಿಳೆ 23 ವರ್ಷದ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆಯೇ ಕೊಲೆಗೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ.

ತ್ರಿಕೋನ ಪ್ರೇಮಕಥೆಗೆ ಯುವತಿಯ ಬಲಿ :

ಘಟನೆಯ ದಿನ ಶಿಫಾಗೆ, ಶಿವಾಜಿ ನಗರ ಪ್ರದೇಶದಲ್ಲೇ ವಾಸವಾಗಿದ್ದ ಮತ್ತೊಬ್ಬ ಮಹಿಳೆಯನ್ನು ಭೇಟಿಯಾಗುವಂತೆ ಕರೆ ಬಂದಿದೆ. ಆ ಕರೆ ಬಂದ ನಂತರ ಶಿಫಾ ಮನೆಯಿಂದ ಹೊರಟು ಮಸೀದಿ ಸಮೀಪಕ್ಕೆ ತೆರಳಿದ್ದಳು.

ಅಲ್ಲಿ ಶಿಫಾ, 25 ವರ್ಷದ ಮಹಿಳೆ ಮತ್ತು 23 ವರ್ಷದ ಯುವಕ ನಡುವೆ ಭೇಟಿಯಾಗಿದ್ದು, ಯಾವುದೋ ವಿಷಯಕ್ಕೆ ಸಂಬಂಧಿಸಿ ತೀವ್ರ ವಾಗ್ವಾದ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ವಾಗ್ವಾದದ ವೇಳೆ 25 ವರ್ಷದ ಮಹಿಳೆಯೋರ್ವಳು ಶಿಫಾ ಅವರ ಮುಖಕ್ಕೆ ನೇರವಾಗಿ ಗುಂಡು ಹಾರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡು ಶಿಫಾ ಅವರ ಕೆನ್ನೆ ಮೂಲಕ ಪ್ರವೇಶಿಸಿ ತಲೆಬುರುಡೆಗೆ ತಗುಲಿದ್ದು, ಆಕೆಗೆ ಗಂಭೀರ ಗಾಯಗಳಾಗಿವೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿಫಾಳನ್ನು ಗಮನಿಸಿದ ಸ್ಥಳೀಯರು ತಕ್ಷಣ ಆಕೆಯನ್ನು ರಾಜವಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ ಗುಂಡು ಅತ್ಯಂತ ಹತ್ತಿರದಿಂದ ಹಾರಿಸಲ್ಪಟ್ಟಿದ್ದರಿಂದ ಗಾಯಗಳ ತೀವ್ರತೆ ಹೆಚ್ಚಾಗಿದ್ದು, ಆಸ್ಪತ್ರೆ ತಲುಪುವ ಮಾರ್ಗಮಧ್ಯೆಯೇ ಶಿಫಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಘಟನೆಯ ಮಾಹಿತಿ ಪಡೆದ ತಕ್ಷಣ ಮುಂಬೈ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿ, ಸ್ಥಳೀಯರ ಮಾಹಿತಿ ಹಾಗೂ ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ, ಪೊಲೀಸರು ಅಪರಾಧ ನಡೆದ ಕೇವಲ 12 ಗಂಟೆಗಳ ಒಳಗೆ 25 ವರ್ಷದ ಮಹಿಳೆ ಮತ್ತು 23 ವರ್ಷದ ಯುವಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನು ಓದಿ : ಅನೈತಿಕ ಸಂಬಂಧ : ಡ್ರಮ್‌ನಲ್ಲಿ ಶವ ಪತ್ತೆ ; ಪತ್ನಿ–ಪ್ರಿಯಕರರಿಂದ ಭೀಕರ ಕೊಲೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದು, ತ್ರಿಕೋನ ಪ್ರೇಮ ಸಂಬಂಧವೇ ಕೊಲೆಗೆ ನೇರ ಕಾರಣವೇ ಎಂಬುದನ್ನು ಎಲ್ಲಾ ಆಯಾಮಗಳಿಂದ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರೇಮಿಗಳ ದಿನ (Valentine’s Day) ದ ಸಂಭ್ರಮದ ಮುನ್ನ ನಡೆದ ಈ ದುರ್ಘಟನೆ, ಪ್ರೀತಿ ಹೆಸರಿನಲ್ಲಿ ಉಂಟಾಗುವ ಅಸಹನೀಯತೆ ಮತ್ತು ಅತಿರೇಕ ಎಷ್ಟು ಅಪಾಯಕಾರಿ ಎನ್ನುವುದಕ್ಕೆ ಮತ್ತೊಂದು ಎಚ್ಚರಿಕೆಯಾಗಿದೆ.

Courtesy : vijayavani.net 


Disclaimer : ಈ ಸುದ್ದಿಯಲ್ಲಿ ಉಲ್ಲೇಖಿಸಿರುವ ಮಾಹಿತಿಗಳು ಪೊಲೀಸ್ ಮೂಲಗಳು ಮತ್ತು ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಪ್ರಕಟಿಸಲಾಗಿದ್ದು, ತನಿಖೆ ಮುಂದುವರಿದಿದೆ.

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments