ಮಂಗಳವಾರ, ಜನವರಿ 13, 2026

Janaspandhan News

HomeCrime Newsತುಮಕೂರು ಬಳಿ ಭೀಕರ ಅಪಘಾತ: ಲಾರಿಗೆ ಕ್ರೂಸರ್ ಡಿಕ್ಕಿ, 4 ಅಯ್ಯಪ್ಪ ಮಾಲಾಧಾರಿಗಳು ಮೃತ್ಯು
spot_img
spot_img

ತುಮಕೂರು ಬಳಿ ಭೀಕರ ಅಪಘಾತ: ಲಾರಿಗೆ ಕ್ರೂಸರ್ ಡಿಕ್ಕಿ, 4 ಅಯ್ಯಪ್ಪ ಮಾಲಾಧಾರಿಗಳು ಮೃತ್ಯು

ಜನಸ್ಪಂದನ ನ್ಯೂಸ್‌, ತುಮಕೂರು : ತುಮಕೂರು ತಾಲೂಕಿನ ಕೋರಾ ಸಮೀಪ ಇಂದು (ದಿ.09) ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಬೆಳಿಗ್ಗೆ ಸುಮಾರು 4.45ರ ವೇಳೆಗೆ ನಿಂತಿದ್ದ ಲಾರಿಗೆ ಅಯ್ಯಪ್ಪ ಮಾಲಾಧಾರಿಗಳು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟ ನಾಲ್ವರೂ ಕೊಪ್ಪಳ ಜಿಲ್ಲೆ ಮೂಲದವರು ಎಂದು ಗುರುತಿಸಲಾಗಿದ್ದು, ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕ್ರೂಸರ್‌ನಲ್ಲಿ ಒಟ್ಟು 11 ರಿಂದ 12 ಮಂದಿ ಭಕ್ತರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರ ವಿವರ :

ಅಪಘಾತದಲ್ಲಿ ಮೃತಪಟ್ಟವರನ್ನು:

  • ಸಾಕ್ಷಿ (7),
  • ವೆಂಕಟೇಶಪ್ಪ (30),
  • ಮಾರತಪ್ಪ (35) ಮತ್ತು
  • ಗವಿಸಿದ್ದಪ್ಪ (40) ಎಂದು ಗುರುತಿಸಲಾಗಿದೆ.

ಮೃತರೆಲ್ಲರೂ ಕೊಪ್ಪಳ ಜಿಲ್ಲೆಯ ಯಲಬುರ್ಗಾ–ಕುಕನೂರು ಪ್ರದೇಶದ ನಿವಾಸಿಗಳು ಎಂದು ತಿಳಿದುಬಂದಿದೆ.

ಗಾಯಾಳುಗಳ ಸ್ಥಿತಿ :

ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಾಗಿ, ಪ್ರಶಾಂತ್ (32), ಪ್ರವೀಣ್ ಕುಮಾರ್ (28), ರಾಜಪ್ಪ (45), ಉಲಗಪ್ಪ (32), ರಾಕೇಶ್ (24), ತಿರುಪತಿ (33), ಶ್ರೀನಿವಾಸ್ (32) ಸೇರಿದಂತೆ ಇತರರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಗಳನ್ನು ಕಳೆದುಕೊಂಡ ತಂದೆಯ ಆಕ್ರಂದನ :

ಅಪಘಾತದಲ್ಲಿ ಏಳು ವರ್ಷದ ಮಗಳನ್ನು ಕಳೆದುಕೊಂಡ ತಂದೆ ಉಲಗಪ್ಪ ಕಣ್ಣೀರಿಟ್ಟಿದ್ದಾರೆ. “ನನ್ನ ಮಗಳು ಸಾಕ್ಷಿ ನನ್ನ ಪಕ್ಕದಲ್ಲೇ ಮಲಗಿದ್ದಳು. ದೇವರ ದರ್ಶನ ಮಾಡಿ ಸುಖವಾಗಿ ವಾಪಸ್ ಬರುತ್ತಿದ್ದೆವು. ಅಪಘಾತ ಹೇಗಾಯಿತು ಎಂದು ಗೊತ್ತಿಲ್ಲ. ಇದು ಎರಡನೇ ಬಾರಿ ಮಗಳನ್ನು ಶಬರಿಮಲೆಗೆ ಕರೆದುಕೊಂಡು ಹೋಗಿದ್ದೆವು” ಎಂದು ಅವರು ನೋವಿನಿಂದ ಹೇಳಿದ್ದಾರೆ.

ಯಾತ್ರೆಯ ವಿವರ :

ಮಾಲಾಧಾರಿಗಳು ಜನವರಿ 5ರಂದು ಶಬರಿಮಲೆಗೆ ತೆರಳಿ, 7ರಂದು ತಲುಪಿದ್ದರು. ಬುಧವಾರ ಅಯ್ಯಪ್ಪಸ್ವಾಮಿ ದರ್ಶನ ಪಡೆದ ನಂತರ ಗುರುವಾರ ತಮಿಳುನಾಡಿನ ಪಳನಿ ಮುರುಗನ್ ದೇವಸ್ಥಾನಕ್ಕೆ ತೆರಳಿದ್ದು, ಅಲ್ಲಿಂದ ಬೆಂಗಳೂರು–ತುಮಕೂರು ಮಾರ್ಗವಾಗಿ ಕೊಪ್ಪಳಕ್ಕೆ ವಾಪಸ್ ಆಗುವ ವೇಳೆ ಈ ದುರ್ಘಟನೆ ಸಂಭವಿಸಿದೆ.

ಇದನ್ನು ಓದಿ : Car – KSRTC ಬಸ್ ಭೀಕರ ಅಪಘಾತ ; ಮೂವರು ಯುವಕರ ದುರ್ಮರಣ.

ಪೊಲೀಸ್ ತನಿಖೆ :

ಈ ಅಪಘಾತ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವೇನು ಎಂಬ ಕುರಿತು ತನಿಖೆ ಮುಂದುವರಿದಿದೆ.


Disclaimer : ಈ ಸುದ್ದಿಯಲ್ಲಿರುವ ಮಾಹಿತಿ ಪೊಲೀಸ್ ಹಾಗೂ ಸ್ಥಳೀಯ ಮೂಲಗಳಿಂದ ಲಭ್ಯವಾದ ಪ್ರಾಥಮಿಕ ಮಾಹಿತಿಯ ಆಧಾರದಲ್ಲಿದೆ. ತನಿಖೆ ಮುಂದುವರಿದಿರುವುದರಿಂದ ಅಧಿಕೃತ ದೃಢೀಕರಣದ ಬಳಿಕ ವಿವರಗಳಲ್ಲಿ ಬದಲಾವಣೆ ಸಾಧ್ಯತೆ ಇದೆ.

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments