ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರು ನಗರ ಪೊಲೀಸ್ ಆಯುಕ್ತರು, ರಸ್ತೆ ಮಧ್ಯದಲ್ಲಿ ಪ್ರಯಾಣಿಕರನ್ನು ತಡೆದು ಸುಲಿಗೆ ಮಾಡುವ ಟ್ರಾಫಿಕ್ ಪೊಲೀಸರಿಗೆ ಈ ಒಂದು ಪ್ರಕರಣದ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಅಷ್ಟಕ್ಕೂ ಏನಿದು ಪ್ರಕರಣ.? ನಡೆದಿದ್ದು ಯಾವಾಗ.? ನಂತರ ಏನಾಯ್ತು ಎಂಬ ಮಾಹಿತಿ ಇಲ್ಲಿದೆ ಓದಿ.
ನಗರದ ಪೊಲೀಸ್ ಆಯುಕ್ತ ದಯಾನಂದ್ (Dayanand) ಅವರು, ಮಹಿಳೆಯೊಬ್ಬರನ್ನು ಬೆದರಿಸಿ ಹಣ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಸಂಚಾರ ಪೊಲೀಸರನ್ನು ಸಸ್ಪೆಂಡ್ (Suspend) ಮಾಡಿದ್ದಾರೆ.
ಜೀವನ್ ಭೀಮಾ ನಗರ ಸಂಚಾರ ಠಾಣೆ ಇನ್ಸ್ಪೆಕ್ಟರ್ ವೆಂಕಟಾಚಲಪತಿ, ಹೆಡ್ ಕಾನ್ಸ್ಟೇಬಲ್ಗಳಾದ ಗಿರೀಶ್, ಹುಚ್ಚು ಸಾಬ್ ಮತ್ತು ಕಾನ್ಸ್ಟೇಬಲ್ ಬಸಪ್ಪ ಇವರನ್ನು ಅಮಾನತುಗೊಳಿಸಲಾಗಿದೆ
ಕಳೆದ ಶನಿವಾರ ಇಸ್ರೋ ಜಂಕ್ಷನ್ ಬಳಿ ಡ್ರಂಕ್ ಅಂಡ್ ಡ್ರೈವ್ (Drink and Drive) ತಪಾಸಣೆ ನಡೆಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಮದ್ಯಪಾನ ಮಾಡಿ ಚಾಲನೆ ಮಾಡಿರುವುದಾಗಿ ಆರೋಪಿಸಿ ಮಹಿಳೆಯನ್ನು ಬೆದರಿಸಿ 8,000 ರೂಪಾಯಿ ಸುಲಿಗೆ ಮಾಡಿದ ಆರೋಪ ವೆಂಕಟಾಚಲಪತಿ ಹಾಗೂ ಇತರರ ಮೇಲೆ ಕೇಳಿ ಬಂದಿತ್ತು.
ಸಂಚಾರ ಪೊಲೀಸರು ತಮ್ಮ ಮಗಳಿಂದ ಹಣ ಸುಲಿಗೆ ಮಾಡಿದ್ದಾರೆ ಎಂದು ಸಂತ್ರಸ್ತ ಮಹಿಳೆಯ ತಂದೆ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೊಲೀಸ್ ಆಯುಕ್ತರನ್ನು ಟ್ಯಾಗ್ ಮಾಡಿ ದೂರು ನೀಡಿದ್ದರು. ನಂತರ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿತ್ತು.
ಪೂರ್ವ ಸಂಚಾರ ಡಿಸಿಪಿ ಕುಲದೀಪ ಕುಮಾರ್ ಜೈನ್ ಇಲಾಖೆ ಮಟ್ಟದ ತನಿಖೆ ನಡೆಸಿ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಈ ವರದಿಯ ಆಧಾರದಲ್ಲಿ ಪೊಲೀಸ್ ಆಯುಕ್ತರು ಶಿಸ್ತು ಕ್ರಮ ಕೈಗೊಂಡಿದ್ದಾರೆ.