ಈಜಲು ತೆರಳಿದ್ದ ಕೃಷಿ ಅಧಿಕಾರಿ ಹಾಗೂ ಬ್ಯಾಂಕ್ ಉದ್ಯೋಗಿ ನೀರುಪಾಲು.!

ಜನಸ್ಪಂದನ ನ್ಯೂಸ್, ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ದೇವಿಗುಂಡಿಯಲ್ಲಿ ಈಜಲು ಹೋಗಿದ್ದ ಇಬ್ಬರೂ ನೀರುಪಾಲಾದ ಘಟನೆ ನಡೆದಿದೆ.

ಸಾವಿಗೀಡಾದವರು ಸಾಗರದ ಕೃಷಿ ಇಲಾಖೆಯ ಅಧಿಕಾರಿ ಕೆ ಟಿ ಕೃಷ್ಣಕುಮಾರ್ (36) ಮತ್ತು ಹೆಚ್​ಡಿಫ್​ಸಿ ಬ್ಯಾಂಕಿನ ಕಲೆಕ್ಟರ್ ಅರುಣ್ (28) ಎಂದು ತಿಳಿದುಬಂದಿದೆ.

ಕುಟುಂಬದವರೊಂದಿಗೆ ಜೋಗ್ ಫಾಲ್ಸ್ ನೋಡಲು ಬಂದಿದ್ದ ಇಬ್ಬರು ಸಮೀಪದ ದೇವಿಗುಂಡಿ ಬಳಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಜೋಗ ವೀಕ್ಷಣೆಯ ನಂತರ ವಡನ್ ಬೈಲು ಗ್ರಾಮಕ್ಕೆ ಹೋಗುವ ದಾರಿ ಮಧ್ಯೆ ಇರುವ ದೇವಿಗುಂಡಿಗೆ ಹೋಗಿದ್ದಾರೆ. ಅಲ್ಲಿ ಈಜಲು ಹೋಗಿ ಇಬ್ಬರು ನೀರುಪಾಲಾಗಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಸಬ್​ಇನ್ಸ್​ಪೆಕ್ಟರ್​ ಹೊಳೆಬಸಪ್ಪ ಮತ್ತು ಸಿಬ್ಬಂದಿ ಭೇಟಿ ನೀಡಿ, ಮೃತದೇಹಗಳನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಸಾಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.