Breaking News : ರಿಯಲ್ ಸ್ಟಾರ್ ಉಪೇಂದ್ರ ಮೇಲೆ ದಾಖಲಾಯ್ತು ಎಫ್ಐಆರ್.!

ನಸ್ಪಂದನ ನ್ಯೂಸ್, ಬೆಂಗಳೂರು : ಖ್ಯಾತ ಸ್ಯಾಂಡಲ್‌ವುಡ್ ನಟ, ನಿರ್ದೇಶಕ ಉಪೇಂದ್ರ (Upendra) ಅವರ ಮೇಲೆ ಎಫ್‌ಐಆರ್ ದಾಖಲಾಗಿದೆ.

ಒಂದು ಸಮುದಾಯವೊಂದನ್ನು ನಿಂದಿಸಿದ ಆರೋಪವನ್ನ ಉಪೇಂದ್ರ ಅವರು ಎದುರಿಸುತ್ತಿದ್ದು, ಉಪೇಂದ್ರ ವಿರುದ್ಧ ಕಾನೂನು ಹೋರಾಟಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮುಂದಾಗಿದ್ದಾರೆ.

ಸಮುದಾಯವೊಂದನ್ನು ನಿಂದಿಸಿದ ಆರೋಪದ ಮೇಲೆ ಉಪೇಂದ್ರ ವಿರುದ್ಧ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಧುಸೂದನ್‌ ಅವರು ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಉಪೇಂದ್ರ ಮೇಲೆ ಪ್ರಕರಣ ದಾಖಲಾಗಿದ್ದು, ಎಸಿಪಿ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಯುತ್ತಿದೆ.

ನಟ ಉಪೇಂದ್ರ, ಅವರು ಫೇಸ್​ಬುಕ್ ಲೈವ್​ನಲ್ಲಿ ಮಾತನಾಡುತ್ತ, ಮೊದಲಿಗೆ ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷಗಳನ್ನು ಹೊರತುಪಡಿಸಿ ತಮ್ಮದೇ ವಾರಗೆಯ ಇತರೆ ಕೆಲವು ರಾಜಕೀಯ ಪಕ್ಷಗಳಿಗಿಂತಲೂ ಹೆಚ್ಚು ಮತವನ್ನು ಯಾವುದೇ ಪ್ರಚಾರವಿಲ್ಲದೆ ಪಡೆದಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು.

ಬಳಿಕ ಮಾತು ಮುಂದುವರೆಸಿ ಯಾವುದೋ ಮಾತಿಗೆ ಊರೆಂದರೆ ಹೊಲೆಗೇರಿ ಇದ್ದೇ ಇರುತ್ತದೆ ಎಂದು ಹೊಲೆಗೇರಿಯನ್ನು ತುಚ್ಛವಾಗಿ ಕಾಣುವ ಗಾದೆಯೊಂದನ್ನು ಹೇಳಿದ್ದರು. ಉಪೇಂದ್ರರ ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಮಾತಿನ ವೇಳೆ ನಟ ಉಪೇಂದ್ರ ಶಬ್ಧ ಬಳಕೆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದ್ದು, ಅನೇಕರು ನಟನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.