ಮೊಹರಂ ಮೆರವಣಿಗೆ ವೇಳೆ ದುರಂತ : ವಿದ್ಯುತ್ ಸ್ಪರ್ಶಿಸಿ ನಾಲ್ವರ ಸಾವು, 13 ಜನರಿಗೆ ಗಾಯ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಮೊಹರಂ ಹಬ್ಬದ ನಿಮಿತ್ತ ಶೋಕ ಮೆರವಣಿಗೆ ಹೋಗುತ್ತಿದ್ದ ಜನರಿಗೆ ವಿದ್ಯುತ್​ ತಂತಿ ತಗುಲಿ ನಾಲ್ವರು ಮೃತಪಟ್ಟು, 13 ಜನರು ಗಾಯಗೊಂಡಿರುವ ಘಟನೆ ಜಾರ್ಖಂಡ್​ನ ಬೊಕಾರೋದಲ್ಲಿ ನಡೆದಿದೆ.

ಬೊಕಾರೊ ಜಿಲ್ಲೆಯ ಪೀಟರ್‌ವಾರ್ ಬ್ಲಾಕ್‌ನ ಖೆಟ್ಕೊ ಗ್ರಾಮದಲ್ಲಿ ಮೊಹರಂ ಮೆರವಣಿಗೆ ಹೊತ್ತೊಯ್ಯುತ್ತಿದ್ದ ತಾಜಿಯಾ ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿ ಈ ದುರಂತ ನಡೆದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್​​ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಸ್ಥಳಕ್ಕೆ ಧಾವಿಸಿದ ಬೊಕಾರೊನ ಪೊಲೀಸ್​​ ವರಿಷ್ಠಾಧಿಕಾರಿ ಪ್ರಿಯದರ್ಶಿ ಅಲೋಕ್​​ ಅವರು ಈ ಬಗ್ಗೆ ತನಿಖೆ ನಡೆಸಲಾಗಿದ್ದು, ಘಟನೆಯ ಬಗ್ಗೆ ವರದಿ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಇಂದು ಬೆಳಿಗ್ಗೆ ಸುಮಾರು 6 ಗಂಟೆಗೆ ಮೊಹರಂ ಮೆರವಣಿಗೆ ಪ್ರಾರಂಭವಾಗಿತ್ತು. ಮುಸ್ಲಿಂ ಸಮುದಾಯದ ಧ್ವಜ 11,000 ವೋಲ್ಟ್​​ ಹೈ-ಟೆನ್ಶನ್​​ ವಿದ್ಯುತ್​​ ತಂತಿಗೆ ತಗುಲಿದ ಕಾರಣ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.

ವಿದ್ಯುತ್ ಅವಘಡದ ವೇಳೆ ಮೆರವಣಿಗೆಯಲ್ಲಿ ವಿದ್ಯುತ್ ಸರಬರಾಜಿಗೆ ಇಡಲಾಗಿದ್ದ ಬ್ಯಾಟರಿ ಕೂಡ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.