ಜನಸ್ಪಂದನ ನ್ಯೂಸ್, ರಾಯಚೂರು : ಪಶ್ಚಿಮ ಘಟ್ಟದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಕೃಷ್ಣ ನದಿಯಲ್ಲಿ ನೆರೆ ಬಂದ ಪರಿಣಾಮ ಜಿಲ್ಲೆಯ ಯಾಪಲದಿನ್ನಿ ಹೋಬಳಿಯ ಆತ್ಕೂರು ಗ್ರಾಮದ ಸಮೀಪದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ (Krishna river) ದಡದಲ್ಲಿ ಸುಮಾರು 20 ಮೊಸಳೆಗಳ ಹಿಂಡು ಏಕಕಾಲದಲ್ಲಿ ಪ್ರತ್ಯಕ್ಷಗೊಂಡಿದ್ದು, ನದಿ ದಡದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಕೃಷ್ಣಾ ನದಿಯಲ್ಲಿ ನೀರಿನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಂಡೆ-ಪೊದೆಗಳಲ್ಲಿ ಮೊಸಳೆಗಳು ಅವಿತುಕೊಂಡಿದ್ದು, ಮೊಸಳೆಗಳ ಹಿಂಡು ಕಂಡು ಸ್ಥಳೀಯರು ಬೆಚ್ಚಿ ಬೀಳುತ್ತಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಜಿಟಿಜಿಟಿ ಮಳೆಯಾಗುತ್ತಿದ್ದು, ನದಿಯಲ್ಲಿ ನೀರಿನ ಮಟ್ಟ ಜಾಸ್ತಿಯಾಗುತ್ತಿದೆ. ಪರಿಣಾಮ ಕೃಷ್ಣಾ ನದಿ ತಟದಲ್ಲಿ ಮೊಸಳೆಗಳ ಗುಂಪು ಬಿಡಾರ ಹೂಡಿವೆ.
ಕೃಷ್ಣಾ ನದಿ ತಟದಲ್ಲಿರುವ ಆತ್ಕೂರು, ಡಿ.ರಾಂಪುರ ಗ್ರಾಮಗಳಿಂದ ನಡುಗಡ್ಡೆ ಪ್ರದೇಶಗಳಿಗೆ ಹಾಗೂ ದತ್ತಾತ್ರೇಯ ಹಾಗೂ ನಾರದಗಡ್ಡೆ ಗುಡಿಗೆ ಜನರು ಮತ್ತು ಭಕ್ತರು ನಿತ್ಯ ದೋಣಿ ಮೇಲೆ ಹೋಗುತ್ತಾರೆ. ಇದೀಗ ಆ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಮೊಸಳೆಗಳ ಹಿಂಡು ಕಂಡು ಭಯಭೀತಗೊಂಡಿದ್ದಾರೆ.
ಮೊಸಳೆಗಳ ಗುಂಪಿನ ವಿಡಿಯೋವನ್ನು ಸ್ಥಳೀಯರು ಚಿತ್ರೀಕರಿಸಿದ್ದು ಇದೀಗ ಆ ತುಣುಕು ವೈರಲ್ಗೊಂಡಿದೆ.
ರಾಯಚೂರು: ಆತ್ಕೂರು ಗ್ರಾಮದ ಕೃಷ್ಣ ನದಿ ಪಾತ್ರದಲ್ಲಿ ಮೊಸಳೆಗಳ ದಂಡು ಕಂಡು ಬಂದಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.#Raichur #Crocodiles #Krishna pic.twitter.com/iACEpuOyk3
— Prajavani (@prajavani) July 26, 2023